ಇಸ್ಕಾನ್ ಬೆಂಗಳೂರು ಆರಂಭಿಸಿರುವ ಭವ್ಯ ಜೀವನ (ಲೈಫ್ ಸಬ್ಲೈಮ್) ಕೂಟವು ಭಗವದ್ಗೀತೆಯನ್ನು ನಗರದ ವಿವಿಧ ಭಾಗಗಳ ಮನೆ ಮತ್ತು ಅಪಾರ್ಟ್ಮೆಂಟ್ಗಳಿಗೆ ತೆಗೆದುಕೊಂಡು ಹೋಗುತ್ತದೆ. ಸದಾ ಗಡಿಬಿಡಿಯಲ್ಲಿರುವ ವೃತ್ತಿಪರ ಜನರಿಗೆ ಗೀತೆಯ ಸಾರವನ್ನು ತಿಳಿಸುವುದೇ ಇದರ ಉದ್ದೇಶ. ಈ ಕಟ್ಟಡಗಳ ಕ್ಲಬ್ಹೌಸ್ ಮತ್ತು ಸಂಘಗಳು ವಾರಾಂತ್ಯಗಳಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳಿಂದ ಸಂತೋಷಭರಿತವಾಗಿರುತ್ತವೆ. ಇಸ್ಕಾನ್ ಸ್ವಯಂಸೇವಕರು ಅಲ್ಲಿನ ನಿವಾಸಿಗಳಿಗೆ ಗೀತೆ ಅರಹುತ್ತಾರೆ.
ಇಸ್ಕಾನ್ ಬೆಂಗಳೂರಿನ ಹಿರಿಯ ಉಪಾಧ್ಯಕ್ಷರಾದ ಶ್ರೀ ಚಂಚಲಾಪತಿ ದಾಸ ಅವರು ಹೇಳುತ್ತಾರೆ, “ಭಗವದ್ಗೀತೆಯ ಸಂದೇಶವು ಜ್ಞಾನೋದಯ, ಮತ್ತು ವಿಮೋಚನೆ ಮಾಡುವುದಾಗಿದೆ. ಒತ್ತಡ, ವೃತ್ತಿ ಬದುಕಿನ ಸವಾಲುಗಳು, ಸ್ಪರ್ಧಾತ್ಮಕ ಪರಿಸರದಲ್ಲಿ ಬದುಕಿರುವುದು, ನಿರೀಕ್ಷಿತ ನಿರ್ವಹಣೆಯನ್ನು ಪೂರೈಸುವುದು, ಕೌಟುಂಬಿಕ ಅಗತ್ಯವನ್ನು ಪೂರೈಸುವುದು – ಇವುಗಳಿಂದಾಗಿ ಆಧುನಿಕ ಸಮಾಜಕ್ಕೆ ಗೀತೆಯ ಸಂದೇಶ ತುಂಬ ಅಗತ್ಯವಾಗಿದೆ. ಭಗವದ್ಗೀತೆಯ ಸಂದೇಶ ಮತ್ತು ಕೃಷ್ಣಪ್ರಜ್ಞೆಯ ಸರಳ ಆಚರಣೆಯು ಜನರಿಗೆ ಇವುಗಳನ್ನು ಸಕಾರಾತ್ಮಕವಾಗಿ ನಿರ್ವಹಿಸಲು ನೆರವಾಗುತ್ತದೆ.”
ಈ ಕಾರ್ಯಕ್ರಮವನ್ನು ಉಚಿತವಾಗಿ ನಡೆಸಿಕೊಡಲಾಗುವುದು. ಇಸ್ಕಾನ್ ಭಕ್ತರಿಂದ ಚಿಂತನಶೀಲ ಉಪನ್ಯಾಸ, ಧ್ಯಾನ ಮತ್ತು ಭಜನೆ, ಕೀರ್ತನೆಗಳು ಈ ಕಾರ್ಯಕ್ರಮದಲ್ಲಿ ಇರುತ್ತವೆ.
ಧರ್ಮ ಗ್ರಂಥಗಳ ನಿಯಂತ್ರಣಗಳಿಗೆ ಲಕ್ಷ್ಯ ನೀಡದೆ ಇಂದ್ರಿಯ ಸುಖದತ್ತ ಮುಖಮಾಡಿರುವ ಆಧುನಿಕ ಶಿಕ್ಷಣದ ದೋಷಗಳ ಬಗೆಗೆ ಇಸ್ಕಾನ್ ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರು ಆತಂಕಗೊಂಡಿದ್ದರು. ಅವರು ಹೇಳುತ್ತಾರೆ, “ನಿಜವಾದ ಶಿಕ್ಷಣದ ಗುರಿಯು ಆತ್ಮ ಸಾಕ್ಷಾತ್ಕಾರ. ಆತ್ಮದ ಆಧ್ಯಾತ್ಮಿಕ ಮೌಲ್ಯಗಳ ಸಾಕ್ಞಾತ್ಕಾರ. ಅಂತಹ ಸಾಕ್ಷಾತ್ಕಾರಕ್ಕೆ ಹಾದಿ ಹಾಕದ ಯಾವುದೇ ಶಿಕ್ಷಣವು ಅವಿದ್ಯಾ ಅಥವಾ ಅಜ್ಞಾನ. ಅಂತಹ ಅಜ್ಞಾನವನ್ನು ಬೆಳೆಸಿಕೊಳ್ಳುವುದೆಂದರೆ, ಅಜ್ಞಾನದ ಅತ್ಯಂತ ಕತ್ತಲ ಪ್ರದೇಶಕ್ಕೆ ಹೋದಂತೆ.”
ನಗರದ ಮಕ್ಕಳ ರೋಗ ತಜ್ಞರೊಬ್ಬರು ಹೇಳುತ್ತಾರೆ, “ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ನಾವು ಇತ್ತಲೂ ಇಲ್ಲ, ಅತ್ತಲೂ ಇಲ್ಲ. ನಮ್ಮ ಮಕ್ಕಳಿಗೆ ವೈದಿಕ ಜ್ಞಾನವನ್ನು ನೀಡುವ ಅಗತ್ಯವಿದೆ. ಗೀತೆ ಉಪನ್ಯಾಸಗಳು ನನಗೆ ನನ್ನ ಒತ್ತಡ ನಿವಾರಣೆಗೆ ಮತ್ತು ನಮ್ಮ ಸಂಸ್ಕೃತಿಯೊಂದಿಗೆ ನನ್ನ ಸಂಪರ್ಕಕ್ಕೆ ಅತ್ಯುತ್ತಮ ಸಾಧನವಾಯಿತು.”
ಉನ್ನತ ಶಿಕ್ಷಣ ಪಡೆದಿರುವ ಮತ್ತು ಉನ್ನತ ಹುದ್ದೆಯಲ್ಲಿರುವ ಮತ್ತೊಬ್ಬ ಭಾಗಿಯು ಭಗವದ್ಗೀತೆಯ ವೈಜ್ಞಾನಿಕ ಲಕ್ಷಣವನ್ನು ಅಪಾರವಾಗಿ ಮೆಚ್ಚಿಕೊಂಡರು. ಆಧ್ಯಾತ್ಮಿಕ ಆಚರಣೆಯು ಕೇವಲ ಶ್ರದ್ಧೆ ಅಥವಾ ನಂಬಿಕೆ ಆಧಾರಿತ ಎಂಬ ತಪ್ಪು ತಿಳಿವಳಿಕೆಗೆ ಪ್ರತಿಯಾಗಿ ಭಗವದ್ಗೀತೆಯು ವೈಜ್ಞಾನಿಕವಾಗಿದೆ ಎನ್ನುವುದು ಅವರ ಅಭಿಪ್ರಾಯ.
ಪ್ರಸ್ತುತದಲ್ಲಿ ಭವ್ಯ ಬದುಕು ಕಾರ್ಯಕ್ರಮವನ್ನು ಈ ಸ್ಥಳಗಳಲ್ಲಿ ನಡೆಸಲಾಗುತ್ತಿದೆ :
- ಗೋಕುಲಂ ಅಪಾರ್ಟ್ಮೆಂಟ್ಸ್, ಕನಕಪುರ ರಸ್ತೆ
- ಗೋಲ್ಡನ್ ಗ್ರಾಂಡ್, ತುಮಕೂರು ರಸ್ತೆ, ಯಶವಂತಪುರ
- ಪೂರ್ವ ಫೌಂಟನ್ ಸ್ಕ್ವೇರ್, ಮಾರತ್ತಹಳ್ಳಿ ಬ್ರಿಡ್ಜ್, ವೈಟ್ಫೀಲ್ಡ್
- ಪ್ರೆಸ್ಟೀಜ್ ಶಾಂತಿನಿಕೆತನ್, ವೈಟ್ಫೀಲ್ಡ್
- ಬ್ರಿಗೇಡ್ ಮೆಟ್ರೊಪೊಲಿಸ್, ವೈಟ್ಫೀಲ್ಡ್
- ಮಂತ್ರಿ ಟ್ರಾಂಕ್ವಿಲ್, ಕನಕಪುರ ರಸ್ತೆ
- ಟೆಂಪಲ್ ಬೆಲ್ಸ್, ಇಸ್ಕಾನ್ ಎದುರು, ರಾಜಾಜಿನಗರ
- ಪ್ರೆಸ್ಟೀಜ್ ವೆಲ್ಲಿಂಗ್ಟನ್, ಜಾಲಹಳ್ಳಿ
- ಪೂರ್ವಾಂಕರ ಪ್ರೊಮೆನೆಡ್, ಜೆಪಿ ನಗರ.